ಸೋಮವಾರ, ಜನವರಿ 13, 2014

ಕಾಗದದ ದೋಣಿಗಳು

ಕಾಗದದ ದೋಣಿಗಳು ತೇಲಿದರು ಏನಂತೆ
ಮಿನುಗದೇ ಮರಿ ಬೆಳಕು ಮಡಿಲಿನಲ್ಲಿ?
ತೆವಳಿದರು ಏನಂತೆ ಕಾಲು ಇಲ್ಲದ ಗಾಳಿ
ಚೆಲ್ಲದೇ ಕಂಪನ್ನು ದಾರಿಯಲ್ಲಿ?

ನಾರುತಿಹ ಗೊಬ್ಬರವು ಜೀವರಸವಾಗಿ
ಊರದೇ ಪರಿಮಳವ ಮಲ್ಲಿಗೆಯಲಿ?
ತಿಂದೆಸೆದ ಓಟೆಯೂ ಮರವಾಗಿ ಹರವಾಗಿ
ವರವಾಗದೇ ಹೇಳು ಹಣ್ಣಿನಲ್ಲಿ?

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು
ಸೀನೀರ ಮೋಡಗಳ ತಾರದೇನು?
ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ
ಕಾಯುವುದು ಸಮಯದಲಿ ಲೋಕವನ್ನು

ಒಂದೊಂದು ವಸ್ತುವಿಗೂ ಒಂದೊಂದು ಮಾಯೆ
ಒಂದೊಂದಕೂ ಸ್ವಂತ ಧಾಟಿ ನಡಿಗೆ
ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ
ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ

                                                             - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: