ಶನಿವಾರ, ಅಕ್ಟೋಬರ್ 30, 2010

ಕವಿ ಬರೆದ

ಕವಿ ಬರೆದ:
ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೇ ಇರಿದಿರಿದು.
ಆಂತರ್ಯ ಸಂಚಯಿತ ಬಾಧೆಯನೆ ಸುರಿದೆರೆದು.
ಬಾಳ ಕುಲುಮೆಗೆ ಸಂದು
ಸದ್ದಿರದೆ ಕಡು ಬೆಂದು
ಬೂದಿಯೊಲುಮೆಗಳ -
ಲೋಕದನ್ಯಾಯಕ್ಕೆ,
ಜಾತಿಮತವರ್ಗಗಳ ನಿಷ್ಕರುಣ ತುಳಿತಕ್ಕೆ
ನುಚ್ಚಾದ ನಲುಮೆಗಳ -
ಹೊಸ ನೆತ್ತರುಕ್ಕಿಂದ ಮೇಲೇರಿ ಬರುವಲ್ಲೆ,
ದಾರಿಗಾಣದೆ ಸುಯ್ದು ನೆಲದಾಳದಲ್ಲೆ
ಹಿಂಜರಿದ ನೂರಾರು ಯೌವನದ ಚಿಲುಮೆಗಳ -
ಮಾಸ, ಮಾಸದವರೆಗು ಭಾರವನು ತಾ ಹೊತ್ತು
ಹಗಲಿರುಳು ಯಾತನೆಯನನುಭವಿಸಿ ಅತ್ತು
ಕವಿ ಹೆತ್ತ ಕವಿತೆಯನು - ಜೀವವನೆ ತೆತ್ತು. 

ತನ್ನ ಕೃತಿ ಕೀಳಲ್ಲ,
ಬಿತ್ತಿದುದು ಬೀಳಲ್ಲ,
ಕಾವ್ಯಕೂ ಮಿಗಿಲಿಲ್ಲ ಕಲೆಯೊಳಗೆ ಎಂದೆನೆಸಿ -
ತನ್ನ ಸೃಷ್ಟಿಯ ಪದರ ಪದರವನೆ ಅಲೆದರಸಿ
ತಳದಾಣಿಮುತ್ತುಗಳ ಎಳೆತರುವ ಭಾವುಕನ
ಬರವನ್ನೆ ತಾ ಕನಸಿ,
ಬರೆದ ಕವಿ
ಲೋಕಾನುಭವಿ.

                                                   - ಕೆ. ಎಸ್. ನಿಸಾರ್ ಅಹಮದ್

ಕಾಮೆಂಟ್‌ಗಳಿಲ್ಲ: