ಶನಿವಾರ, ಅಕ್ಟೋಬರ್ 30, 2010

ಪ್ರಾರಂಭಕ್ಕೆ ಮುನ್ನ....

 ಕನ್ನಡ ಕಾವ್ಯ ಪ್ರೇಮಿಗಳೆಲ್ಲರಿಗೂ ಆತ್ಮೀಯ ಸ್ವಾಗತ...

        ಯಾವುದೋ ಸಮಯದಲ್ಲಿ ನೆನಪಾಗಿಯೂ ನೆನಪಾಗದೆ ಕವನಗಳು ಕಾಡುವಾಗೆಲ್ಲ, ಬರಿ ಕವನಗಳೇ ತುಂಬಿರುವ, ಬೇಕೆಂದಾಗ ದೊರಕುವ ತಾಣವೊಂದಿದ್ದರೆ ಎಷ್ಟು ಚೆಂದ ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತಿದ್ದೆ. ಹೀಗಾಗಿ ಎಲ್ಲೇ ಉತ್ತಮ ಕವನಗಳು ಕಣ್ಣಿಗೆ ಬಿದ್ದರೂ, ಮನಸ್ಸಿಗೆ ಮುದ ನೀಡಿದರೂ ಬರೆದಿಟ್ಟುಕೊಳ್ಳುವ ಹುಚ್ಚು ಅಭ್ಯಾಸವನ್ನೂ ಬೆಳೆಸಿಕೊಂಡೆ. ಅವೆಲ್ಲವನ್ನೂ ಒಂದೆಡೆ ಸಂಗ್ರಹಿಸಿ, ಇತರರೂ ಓದುವಂತಾಗಬೇಕೆಂಬ  ಬಹುದಿನದ ಕನಸು ಇಂದು ನನಸಾಗಿದೆ..

         ಮನದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಹೋಲಿಕೆ, ಪ್ರತಿಮೆ, ಛಂದಸ್ಸುಗಳಿಂದ ಸಿಂಗರಿಸಿ ಕಾವ್ಯವನ್ನಾಗಿಸುವ ಪ್ರತಿ ಕವಿ ಹೃದಯದೆಡೆಗೂ ನನಗೇಕೊ ಮೊದಲಿಂದಲೂ ಬೆರಗು ತುಂಬಿದ ಅಸೂಯೆ..

      ಯಾವುದೋ ಹಳೆಯ ಸಂಬಂಧ, ಕಳೆದುಹೋದ ವ್ಯಕ್ತಿ, ಮಣ್ಣಾದ ಆಸೆಗಳು, ಕಾಡುವ ಕಹಿ-ಸಿಹಿ ನೆನಪುಗಳು, ಕಹಿ ನಿರಾಶೆ-ಹತಾಶೆಗಳು... ಇವುಗಳ ಜೊತೆಗೂ ಮತ್ತೆ ಚಿಗುರುವ, ಹೊಸ ಗಮ್ಯದೆಡೆಗೆ ಸಾಗುವ ಭರವಸೆ, ಛಲ, ಆತ್ಮವಿಶ್ವಾಸ... ಇವೆಲ್ಲದಕೂ ಮೌನ ಧ್ವನಿಯಾಗುವ ಕವನಗಳೆಂದರೆ ಎಂಥದ್ದೋ ಸೆಳೆತ..

       ಅರೆ! ಇದು  ನನ್ನ ಮನದ ಭಾವನೆಯೇ ಅಲ್ಲವೇ?! ಎಂದು ಅಚ್ಚರಿ ಮೂಡಿಸುತ್ತಲೇ ಹೃದಯಕ್ಕೆ ಆಪ್ತವಾಗುವ, ಏಕಾಂತದಲ್ಲಿ ಜೊತೆಯಾಗುವ, ಮನದ ತುಮುಲಗಳನ್ನು ಹೊರಹಾಕುವ ಪರಿಣಾಮಕಾರಿ ಮಾಧ್ಯಮವೂ ಆಗುವ ಕವನಗಳ ಭಾವತೀವ್ರತೆ, ದೊರಕುವ ಭಾವಾನಂದವನ್ನು ಅನುಭವಿಸಿಯೇ ತೀರಬೇಕು..

       ಕನ್ನಡ ಸಾಹಿತ್ಯವನ್ನೋದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ನನ್ನ ಓದಿಗೆ ನಿಲುಕಿದ ಹಳೆ, ಹೊಸ ಕವಿಗಳ ಕವನಗಳು , ನಾನು ಗುನುಗುತ್ತಿದ್ದ ಭಾವಗೀತೆಗಳು ನಿಮ್ಮನ್ನೂ ಕಾಡಲಿ ಎಂಬ ಉದ್ದೇಶದಿಂದ ಈ ಬ್ಲಾಗನ್ನು ಪ್ರಾರಂಭಿಸುತ್ತಿದ್ದೇನೆ. ಜೊತೆಗೆ, ಕನ್ನಡ ಕಾವ್ಯ ಕಂಪನ್ನು ಪಸರಿಸುವಲ್ಲಿ ನಾನೂ ಕೊಂಚ ಅಳಿಲು ಸೇವೆ ಮಾಡೋಣವೆಂದಿದ್ದೇನೆ. ಮರೆತ ಕವನವನ್ನು ನೆನಪಿಸುವ, ಸಿಕ್ಕವುಗಳನ್ನು ರವಾನಿಸುವ ಮೂಲಕ ನನ್ನ ಪ್ರಯತ್ನಕ್ಕೆ ನಿಮ್ಮ ಸಹಾಯವೂ ದೊರೆತರೆ ನಾನು ತುಂಬಾ ಋಣಿ..

      ಕೋರಿಕೆಯಿಷ್ಟೇ: ದಯವಿಟ್ಟು ಈ ಬ್ಲಾಗನ್ನು ನಿಮ್ಮ ಆತ್ಮಿಯರಿಗೂ ಪರಿಚಯಿಸಿ. ಇಲ್ಲಿನ ಕವಿತೆಗಳು ಯುವ  ಕವಿಗಳಿಗೆ ದಾರಿ ದೀವಿಗೆಯಾಗಲಿ, ಹೊಸ ಸ್ಪೂರ್ತಿ ತುಂಬಲಿ.. ಕಾವ್ಯಪ್ರೇಮಿಗಳ ಹಂಬಲ ತುಸುವಾದರೂ ತಣಿಯಲಿ..

      ಮತ್ತೇನಿಲ್ಲ,
     ನಿಮ್ಮೆಲ್ಲರನ್ನೂ ಕವಿತೆಗಳು ಮತ್ತೆ ಮತ್ತೆ ಕಾಡಲಿ!!

     ಅಕ್ಕರೆಯಿಂದ,
     ಕನಸು..

2 ಕಾಮೆಂಟ್‌ಗಳು:

venkatesh vardhan ಹೇಳಿದರು...

dear kanasu, nimma sangraha mecchuvanthaddu nanage thumba ishtavaithu

danyavadagalu by venkatesh vardhan

ಕನಸು.. ಹೇಳಿದರು...

ಧನ್ಯವಾದಗಳು.. :)