ಗುರುವಾರ, ಡಿಸೆಂಬರ್ 30, 2010

ಪ್ರಥಮ ರಾಜನಿಗೆ

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ,
- ಆರದಿರಲಿ ಬೆಳಕು!
ಕಡಲೂ ನಿನ್ನದೆ, ಹಡಗೂ ನಿನ್ನದೆ,
- ಮುಳುಗದಿರಲಿ ಬದುಕು!

ಬೆಟ್ಟವೂ ನಿನ್ನದೆ, ಬಯಲೂ ನಿನ್ನದೆ,
- ಹಬ್ಬಿ ನಗಲಿ ಪ್ರೀತಿ!
ನೆಳಲೋ ಬಿಸಿಲೋ, ಎಲ್ಲವೂ ನಿನ್ನವೇ
- ಇರಲಿ ಏಕರೀತಿ!

ಆಗೊಂದು ಸಿಡಿಲು, ಈಗೊಂದು ಮುಗಿಲು
- ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
- ನಿನಗೆ ನಮಸ್ಕಾರ.

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
- ನಿನ್ನ ಪ್ರತಿಧ್ವನಿ :
ಆ ಮಹಾಕಾವ್ಯ, ಈ ಭಾವಗೀತೆ
- ನಿನ್ನ ಪದಧ್ವನಿ.

ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ,
- ಕೀರ್ತಿ ಇವು ನಿನಗೆ.
ಆ ಮಧ್ಯರಾತ್ರಿ, ಈ ಉದಯಸೂರ್ಯ
- ಮೂರ್ತಿ ಇವು ನಿನಗೆ.

ಕ್ಷಾಮ, ತುಷ್ಟಿ, ನಿನ್ನದೆ ಈ ಸೃಷ್ಟಿ
- ಕಡೆಗೆ ಎಲ್ಲಾ ಒಂದೆ.
ಹಿಡಿವುದೆಲ್ಲವನು ನಿನ್ನ ತಾಯ್ - ದೃಷ್ಟಿ,
- ನಿನಗೆ ಎಲ್ಲಾ ಒಂದೆ.

ಈ ಸೃಷ್ಟಿಗೆಲ್ಲ ಕರ್ತಾರನಾಗಿ,
- ಅಧ್ಯಕ್ಷನಾಗಲೊಲ್ಲೆ!
ಈ ಸೃಷ್ಟಿಗೆಲ್ಲ ಅಧಿಕಾರಿಯಾಗಿ,
- ಕಣ್ಗಿಲ್ಲವಾದೆ, ಅಲ್ಲೆ!

ಪ್ರಜೆಗಳನು ಕರೆದು ಇದೊ ರಾಜ್ಯವಿಹುದು;
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿ ನೋಡದೆಯೆ ನಡೆದೆ.

ಸರ್ವಶಕ್ತಿಯೇ ಸರ್ವತ್ಯಾಗದ
ಗಂಗೆಯಾಗಿ ಹಾರಿದೆ;
ಮುತ್ತಿನ ಕಿರೀಟ, ಮುಳ್ಳಿನ ಕಿರೀಟ
- ಯಾವುದೂ ಇಲ್ಲ ನಡೆದೆ.

ನಿನ್ನಂಥ ರಾಜ ಒಳಗಿದ್ದು ದೂರ;
- ಇನ್ನೆಲ್ಲೋ ನೀನು!
ರಾಜರಹಿತ ರಾಜ್ಯಾಂಗ ಶಾಸನದ
ಪ್ರಾಣಶಕ್ತಿಯೇ ನೀನು!

                                   - ಕೆ.ಎಸ್. ನರಸಿಂಹಸ್ವಾಮಿ
                                   ' ಉಂಗುರ '


ಕಾಮೆಂಟ್‌ಗಳಿಲ್ಲ: