ಕೆ.ಎಸ್.ನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೆ.ಎಸ್.ನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಡಿಸೆಂಬರ್ 27, 2013

ನಾಡ ದೇವಿಯೆ

ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ;
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ-
ಒಂದೆ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ.
                                                          ನಾಡದೇವಿಯೆ...

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದಿ-
ಕಡೆಗಣಿಸುತವರ ನಡೆದಿರುವನೊಬ್ಬ, ಸ್ವಹಿತಕ್ಕೆ ಹಿಡಿದು ದೊಂದಿ.
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈಹೊತ್ತ ಬಡವನೊಬ್ಬ;
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ.
                                                         ನಾಡದೇವಿಯೆ...

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂದೆ;
ದು:ಖಪೂರ ಉಕ್ಕುಕ್ಕಿ ಮೊರೆಯೆ, ಕೊಚ್ಚಿತ್ತು ಬಾಳದಂಡೆ.
ಹೊಟ್ಟೆಹೇಳಿಗೆಯ ಬಿಚ್ಚಿ, ಹಸಿದ ಹಾವನ್ನು ಚುಚ್ಚಿ ಕೆಣಕಿ-
ಯುಕ್ತಿರಾಗದಲಿ ಕುಣಿಸಿ, ದಣಿಸಿ, ನಲಿದಿಹರು ಹಲರು ಬದುಕಿ.
                                                       ನಾಡದೇವಿಯೆ...

ನರನನ್ನೆ ಗಾಳವಾಗಿಸುತ ಬಾಳ ನೀರಲ್ಲಿ, ನಲಿವ ನರಿಗೆ-
ನಾವೊಂದು ಎನುವ ಸತ್ಯಕ್ಕೆ ಅಡ್ಡಗಾಲೆಳೆವ ನಾಡಿನರಿಗೆ,
ಎಚ್ಚರವ ನೀಡಿ ತಿದ್ದುತಲಿರಲಿ ಕವಿಭಾವವೆಂಬ ಬಡಿಗೆ,
ತಾಯಿ ಭಾರತಿಯೆ, ಇದುವೆ ನಿನಗೆ ನಾ ಸಲಿಸಲಿರುವೆ ಕೊಡುಗೆ.
                                                      ನಾಡದೇವಿಯೆ...

ಗುರಿ ಮುಟ್ಟುತಿರಲಿ ಈ ಜೀವ ತಾನು, ಹಿಡಿದೊಂದು ದಿಟದ ದಾರಿ-
ಮರೆಯದಂತೆ ಹೊರಿಸಿರುವ ಋಣವ, ಕೃತಿಯಲ್ಲಿ ಅದನ್ನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ-ಬೆಳಗಿರಲಿ ಬಾಳ ಬತ್ತಿ;
ಕೊನೆಕಾಣಲಮ್ಮ ಅನುಭವದಿ ಮಾಗಿ, ನಿನ್ನಡಿಗೆ ಬಾಗಿ ನೆತ್ತಿ.
                                                      ನಾಡದೇವಿಯೆ...

                                   - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)

ಭಾನುವಾರ, ಡಿಸೆಂಬರ್ 22, 2013

ಪ್ರತೀಕ್ಷೆ

ಈ ದಿನಾಂತ ಸಮಯದಲಿ
ಉಪವನದೇಕಾಂತದಲಿ
ಗೋಧೂಳಿ ಹೊನ್ನಿನಲಿ-
                   ಬರದೆ ಹೋದೆ ನೀನು;
                    ಮರೆತುಹೋದೆ ನೀನು.

ನಾ ಬಿಸುಸುಯ್ಯುವ ಹಂಬಲವೊ,
ಶುಭ ಸಮ್ಮಿಲನದ ಕಾತರವೊ!
ಬಾ ಇನಿಯ, ಕರೆವೆ ನೊಂದು-
                  ಬರದೆ ಹೋದೆ ನೀನು;
                   ಮರೆತುಹೋದೆ ನೀನು.
          ಈ ದಿನಾಂತ...

ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ-
                ಬರದೆ ಹೋದೆ ನೀನು;
                 ಮರೆತುಹೋದೆ ನೀನು.
          ಈ ದಿನಾಂತ...

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು.
ಶಶಿ ಮೆರೆಸಿರೆ ತೋರು ಬೆರಳೂ-
                 ಬರದೆ ಹೋದೆ ನೀನು;
                 ಮರೆತುಹೋದೆ ನೀನು.
         ಈ ದಿನಾಂತ...

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ, ಕಳೆಯೆ ಶಿಕ್ಷೆ-
                ಬರದೆ ಹೋದೆ ನೀನು;
                 ಮರೆತುಹೋದೆ ನೀನು.
         ಈ ದಿನಾಂತ...

                                               - ಕೆ. ಎಸ್. ನಿಸಾರ್ ಅಹಮದ್
                                            ' ಬಹಿರಂತರ ' (೧೯೯೦)

ಬುಧವಾರ, ಡಿಸೆಂಬರ್ 18, 2013

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿಮಗೆ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ,
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

                                     - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)


ಶನಿವಾರ, ನವೆಂಬರ್ 6, 2010

ನಿಸಾರರ ಕವನಗಳು........

ನನ್ನ ಅತ್ಯಂತ ಇಷ್ಟದ ಕವಿ ನಿಸಾರ್.

ಅವರ ಕವನಗಳು ಕಂಠಪಾಠವಾಗುವಷ್ಟರ ಮಟ್ಟಿಗೆ ನನ್ನನ್ನು ಕಾಡಿವೆ! ಹತಾಶೆಯ ಮಡಿಲಿನಲ್ಲೇ ಮರುಹುಟ್ಟು ಅರಸುವ ಅವರ ಕಾವ್ಯ ಸದಾ ಜೀವನ್ಮುಖಿ. ಆಡುಮಾತಿನಲ್ಲಿ ಬಳಕೆಯಾಗುವ ವಸ್ತು-ವಿಷಯಗಳೂ ಕಾವ್ಯದಲ್ಲಿ ಹೋಲಿಕೆಗಳಾಗಿ ಪ್ರಬಲ ಪಾತ್ರ ವಹಿಸಬಲ್ಲವು ಎಂಬುದಕ್ಕೆ ನಿಸಾರರು ಬಳಸುವ ಉಪಮೆ, ರೂಪಕಗಳೇ ಸಾಕ್ಷಿ. ಅವು ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳವಾಗಿ, ಮುಗ್ಧವಾಗಿರುವಂತೆಯೇ, ಅವರ ತೀವ್ರ ಭಾವನೆಗಳ ಆಳಕ್ಕೂ ಕೊಂಡೊಯ್ಯುವಷ್ಟು ಪ್ರಬುದ್ಧವಾಗಿವೆ. 

ಅವರ ಕಾವ್ಯಧಾರೆಯ ಕೆಲವು ಹನಿಗಳು ಇಲ್ಲಿವೆ.. ಓದಿ ಆನಂದಿಸಿ.

ಅಕ್ಕರೆಯಿಂದ,
ಕನಸು..
ನಾದವಿರದ ಬದುಕು

ನಾದವಿರದ ಬದುಕೇ, ಉನ್ಮಾದ ಕೋರಬೇಡ ;
ಈ ನೆಲದ ಜಲವ ಸವಿದು, ರವಿ ಕರುಣೆ ಮರೆಯಬೇಡ.

ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ;
ಸುಡುಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು.

ಕಳೆ ಎಷ್ಟೇ ಇದ್ದರೇನು? ಕನಸಿರದ ಬಾಳು, ಬಾಳೆ?
ಮಳೆಬಿಲ್ಲು ಸಿಂಗರಿಸದ ಕರಿಮುಗಿಲಿನೊಂದು ಮಾಲೆ!

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು ;
ಚೆಲುವೆದುರಿನಲ್ಲಿ ಸತತ ಹೊಸತಾಗಬೇಕು ಕಣ್ಣು.

ಚಣಚಣವು ಜೀವ ಮಾಗಿ, ಮರುಹುಟ್ಟು ಪಡೆಯುತಿರಲಿ ;
ಹೊಸ ನಲವ ನೆಲೆಗೆ ತಾನು ನಿಲದಂತೆ ನಡೆಯುತಿರಲಿ.

                                             -ಕೆ.ಎಸ್. ನಿಸಾರ್ ಅಹಮದ್
                                             ' ನಿತ್ಯೋತ್ಸವ '

ನೀನು ಜೊತೆಯೊಳಿರುವ ವೇಳೆ


ನೀನು ಜೊತೆಯೊಳಿರುವ ವೇಳೆ
ಬಿಗಿದು ನಿಲುವುದೆನ್ನ ಮನಸು.
ಯಾಕೊ ನಿನ್ನ ನಲಿವಿನಲ್ಲಿ
ಪಾಲುಗೊಳ್ಳದೆನ್ನ ಮನಸು.

ಅಗಲಿದೊಡನೆ ಅಂಗಲಾಚಿ
ಕೂಗಿ ಕರೆವುದೆನ್ನ ಮನಸು.
ನಿನ್ನ ದನಿಯ ಜೇನ ಹನಿಗೆ
ಚಡಪಡಿಸುವುದೆನ್ನ ಮನಸು.

ನೀನು ಪರರ ಒಡವೆಯೆಂದು
ಎಚ್ಚರಿಸುವುದೆನ್ನ ಮನಸು.
ಏನೊ ಪಾಪವೆಸಗಿದಂತೆ
ಪರಿತಪಿಸುವುದೆನ್ನ ಮನಸು.

ಇಷ್ಟು ದೂರ ಬಂದ ಬಳಿಕ
ತಿರುಗಲೊಪ್ಪದೆನ್ನ ಮನಸು.
ನಿನ್ನ ಸಂಗ ತೊರೆಯೆನೆಂಬ
ಪಣವ ತೊಡುತಲಿಹುದು ಮನಸು.

ಪಾಪ ಪುಣ್ಯ, ಒಳಿತು ಕೆಡುಕು -
ಗಣಿಸಲಾರದೆನ್ನ ಮನಸು.
ನಿನ್ನ ಪ್ರೇಮ ಕಲ್ಲೋಲದಿ
ಮುಳುಗಲೆಳಸುತಿಹುದು ಮನಸು.

                                - ಕೆ.ಎಸ್. ನಿಸಾರ್ ಅಹಮದ್.
                                ' ಬಹಿರಂತರ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kavanotsava.php

ಎಂಥ ಮಾಟ


ನೋಡು ನೀನೆಂಥ ಮಾಟ ಮಾಡಿರುವೆ
ಕಣ್ಣಿನ ಮರೆಗೆ ಇದ್ದೂ ಕಾಡಿರುವೆ.

ಹೂಡಿ ನೀ ಬಂದು ಯಾವುದೊ ನೆವವ
ಅಂದು ಕಣ್ ಧಾರೆ ಸುರಿಸಿದನುಭವವ,
ಮತ್ತೆ ನಾ ಸವಿವ ಸಂಚು ಹೂಡಿರುವೆ
ಅತ್ತು ಕಾತರಿಸುವ ಆಟ ನೋಡಿರುವೆ.
                                         ನೋಡು ನೀನೆಂಥ ಮಾಟ ಮಾಡಿರುವೆ....
  
ನಿನ್ನ ಹಿಂದೊಮ್ಮೆ ಒಲಿಯಿತೀ ಹೃದಯ
ಸಂದಿದೆ ನಾವು ಅಗಲಿ ಬಲು ಸಮಯ 
ಆದರೂ ಇರಿಯುತಿರುವೆ ನೆನಪಾಗಿ
ಜನ್ಮ ಜನ್ಮಾಂತರದ ವೈರಿ ನೀನಾಗಿ
                                   ನೋಡು ನೀನೆಂಥ ಮಾಟ ಮಾಡಿರುವೆ....

ಚಿತ್ತ ಸಿಂಗಾರಗೊಳಿಸಿ ಒಳ ಕರೆದೆ
ಸಾಟಿಯೇ ಇರದ ಪ್ರೀತಿ ನಾನೆರಿದೆ
ಅಂದು ನಾನೊಲಿದ ಪರಿಗೆ ಈ ಫಲವೆ?
ನೋವಿನಿಂದೆದೆಯ ಕೊರೆವ ಹುಲು ಛಲವೆ?
                            ನೋಡು ನೀನೆಂಥ ಮಾಟ ಮಾಡಿರುವೆ....

                                          - ಕೆ.ಎಸ್. ನಿಸಾರ್ ಅಹಮದ್
                                          ' ಬಹಿರಂತರ '
ಆ ರೂಪ


ಮತ್ತೆ ಆ ರೂಪ ಎದೆಗೆ ಹಾಯುತಿದೆ
ಚಿತ್ತ ಸಂತಾಪದಲ್ಲಿ ಬೇಯುತಿದೆ.
ಎಂದೊ ಹುಗಿದಂಥ ನೆನಹ ಕೆದಕುತಿದೆ
ಮೌನದುತ್ತಾಪದಲ್ಲಿ ಹೊಗೆಯುತಿದೆ.

ಇದ್ದಕಿದ್ದಂತೆ ಹೃದಯ ಹೌಹಾರಿ
ಸದ್ದೆ ಇರದಂತೆ ರೋದಿಸಿದೆ ಚೀರಿ.
ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ;
ಜೀವ ಏನನ್ನೊ ಬೇಡಿ ದುಡುಕುತಿದೆ.
                                  ಮತ್ತೆ ಆ ರೂಪ....

ಅಂದಿನಾಮೋದವನ್ನೆ ಕನವರಿಸಿ
ಬಾರದ ಕಾಲಕಾಗಿ ಚಡಪಡಿಸಿ
ಒಲವಿನ ಕತೆಯ ಮರಳಿ ನೆನೆಯುತಿದೆ
ತೀರದ ಬಯಕೆ ಕಣ್ಣ ಹನಿಸುತಿದೆ.
                                 ಮತ್ತೆ ಆ ರೂಪ....

ಭಾವದಾವೇಗ ಕೊರಳ ಬಿಗಿಸುತಿರೆ
ಜೀವ ಜೀವಾಳವನ್ನೆ ಕಲಕುತಿರೆ
ಫಲಿಸದ ಬಯಕೆಗಾಗಿ ಯಾಚಿಸಿದೆ
ದೀನತಾಭಂಗಿ ಬದುಕ ನಾಚಿಸಿದೆ.
                              ಮತ್ತೆ ಆ ರೂಪ....

                                       - ಕೆ.ಎಸ್. ನಿಸಾರ್ ಅಹಮದ್
                                       ' ಬಹಿರಂತರ '

ನಾ ನಿನ್ನ ಕಂಡಾಗ

ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ;
ಎಷ್ಟೊಂದು ಗೆಲವಿತ್ತು, ಅಷ್ಟೊಂದು ನಗುವಿತ್ತು.

ಹಗಲೆಲ್ಲ ನಿನ್ನ ಧ್ಯಾನ, ಇರುಳೆಲ್ಲ ನಿನ್ನ ಸ್ವಪ್ನ -
ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ.

ನೀ ಸುಳಿದರೆನ್ನ ಬಳಿಗೆ, ನೆರೆ ಬಂದ ಹಾಗೆ ಹೊಳೆಗೆ -
ಹೊಸ ಕಸುವಿನಿಂದ ನಲ್ಲೆ, ನಲವುಕ್ಕಿ ಹಾಡಬಲ್ಲೆ.

ಹಾಲ್ಗೆನ್ನೆ ಸುಳಿಗಳಲ್ಲಿ ನಸುಲಜ್ಜೆಯೆಂಬ ತೇರು ;
ಕಣ್ಣಂತು ಸಾಣೆ ಹಿಡಿದ ಸೆಳೆಮಿಂಚಿನೆರಡು ಚೂರು.

ನನ್ನೆದೆಯ ತೋಟದಲ್ಲಿ ಆಡಾಡು ಓ! ನವಿಲೇ -
ಇಹುದಲ್ಲಿ ಹಚ್ಚ ಹಸಿರು, ಇಳಿದಿಹುದು ಕಾರ್ಮುಗಿಲೇ.

ಹತ್ತಾರು ಚಿಂತೆಯಿರಲಿ, ಬಾಳೆಲ್ಲ ಗೋಳೆ ಇರಲಿ -
ನೀ ನಕ್ಕರೆಲ್ಲ ಮರೆವೆ ಸುಖಸ್ವಪ್ನದಲ್ಲಿ ತೇಲಿ.

ನೆನೆದಾಗ ನಿನ್ನ ರೂಪ, ಎದೆಗತ್ತಲಲ್ಲಿ ದೀಪ -
ಮನಬಿಚ್ಚಿ ಒಮ್ಮೆ ನಗಲು, ನನಗಾವ ಚಿಂತೆ ದಿಗಿಲು?

ಆ ಮೊದಲ ನೋಟದಂತೆ ಮಿಕ್ಕಿರಲಿ ನಿನ್ನ ಸೊಬಗು ;
ಅನುಗಾಲ ನನ್ನ ಮನಕೆ ನೀಡಿರಲಿ ತುಂಬು ಬೆರಗು.

                                                                 -ಕೆ.ಎಸ್. ನಿಸಾರ್ ಅಹಮದ್
                                                                  ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
 http://www.kannadaaudio.com/Songs/Bhaavageethe/home/Nityotsava.php

ಗುರುವಾರ, ನವೆಂಬರ್ 4, 2010

ನೆನಪು

ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ
ಗುಜರಾಯಿಸುತ ಪ್ರತಿಸಲವು, ಉತ್ತರಕೆ ತತ್ತರಿಸಿ
ಮುಖಭಂಗವಾಗಿರುವ, ಹಣೆಬರಹ ಚಿತ್ತಾದ
ನಿರ್ಭಾಗ್ಯ ; ನಿನ್ನಾಸೆಗೆಳ್ಳುನೀರನು ಬಿಟ್ಟು  
ವರ್ಷಗಳು ಕಳೆದಿವೆ, ಚಿಹ್ನೆಗಳು ಉಳಿದಿವೆ.

                     ನನ್ನೆದೆಯ ಹಸುರಲ್ಲಿ
ನಿನ್ನ ನೆನಪಿನ ಕಲ್ಲು ಬಿದ್ದೊಡನೆ ಸದ್ದಿರದೆ
ಹೂತು ಹೋಗುವುದರೊಳಗೆ ಕೆಸರಿನಲ್ಲಿ.

ನಮ್ಮ ಒಲವಿನ ಭೂತ ಕಂಕಾಲ ಹಿಡಿಯಾಗಿ
ಮನದ ಮೂಲೆಯೊಳೆಲ್ಲೊ ಹುಡಿಯಾಗಿದೆ ;
ಅದ ತಿವಿದು ಕೆಣಕುವುದು ನಿನ್ನ ನೆನಹ ಸಲಾಕಿ
ಜೀವವಿದ್ದರೆ ತಾನೆ ಭಾವ ಹೊರಹೊಮ್ಮೀತು?
ಹಳೆಯ ಗಾಯಗಳೆಲ್ಲ ಕಾಲವೈದ್ಯನ ಕುಶಲ
ಕರ್ಮದಿಂದೊಂದೆ ಮಾಯ್ದು, ಗರಿಗಳು ಬಿದ್ದ
ತೆಂಗಿನಂತೆದೆಯುದ್ದ ಗುರುತುಗಳು ಒತ್ತಿಹವು,
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು.

ನೋವುಗಳು, ಕೊರಗುಗಳು ಕದ್ದು ನನ್ನೆದೆ ಹೊಕ್ಕು
ತುಳಿದು ತೊತ್ತಳ ನಡೆದುದಕ್ಕೆ ರುಜುವಾತುಗಳು :
ಮುರಿದು ಜೋತಿರುವೆಳೆಯ ಕೊಂಬೆ ಒಡೆಯದ ಆಸೆ ;
ಬೇರುಗಳು ಬೇರಾಗಿ ಬುಡ ಮೇಲು ಉರುಳಿರುವ
ಹೊಚ್ಚ ಹೊಸ ಉತ್ಸಾಹ ; ಕಾಯಿತನದಲೆ ಉದುರಿ
ಮಣ್ಣುಗೂಡಿದ ಕನಸಿನೆಷ್ಟೊ ಜೊಂಪೆ ; ಸುಗಂಧ
ಬಿಡುವ ಮೊದಲೇ ಎವೆಯನೀಗಲೋ, ಆಗಲೋ
ಮುಚ್ಚುವೆನುವಾರೋಗ್ಯ -
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು,
ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು.

                                                    - ಕೆ.ಎಸ್. ನಿಸಾರ್ ಅಹಮದ್
                                                       ' ಸುಮುಹೂರ್ತ '


ನಿನ್ನ ಮೈತ್ರಿ


ನೂರಾರು ಅನುಭವದ ಅನುಯಾಯಿ ಆಗಿ ಮನ
ಕಂಗೆಟ್ಟು ಚಡಪಡಿಸಿ ನೋಯುತಿರಲು,
ಬಂಧು ಗೆಳೆಯರ ಆಸೆ ಧ್ರುವದೂರವಾಗಿರಲು,
ಸಾವೊಂದೆ ಶರಣೆಂದು ಬೇಯುತಿರಲು,
ನಿನ್ನೊಲವು ರೇವಾಗಿ ಬಳಿಕಂಡು 'ಬಾ'  ಎಂದು
ಸೆಳೆದು ಬಾಚುತ ತನ್ನ ಎದೆಗಪ್ಪಿತು ;
ಕಣ್ಣರಳಿ ನೋಡಿದರೆ ಸ್ವರ್ಗಸುಂದರ ನಗರಿ,
ಸೊಬಗು ಬೆಡಗಿನ ಸಿರಿಗೆ ಮೈ ನವಿರಿತು!

ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೊ ಸಲ
ಎನಿಸುವುದು ; ನನಗಿಂತ ಇಲ್ಲ ಧನ್ಯ.
ನಾನಪಾತ್ರನೋ ಏನೊ ನಿನ್ನಮಲ ಪ್ರೇಮಕ್ಕೆ
ನನಗಂತು ದಕ್ಕಿಹುದು ಜೀವದಾನ!

ಒಮ್ಮೊಮ್ಮೆ ಅಗಲಿಕೆಯ ಆಶಂಕೆ ಹದ್ದಾಗಿ
ಎರಗಿ, ಸುಖವನೆ ಕದ್ದು ಹಾರುವಂತೆ
ತೋರುತಿದೆ, ತೊರೆಯದಿರು; ಹರಿದಿರುವ ಜೀವನಕೆ
ಅಣೆಕಟ್ಟ ಬಿಗಿಯದಿರು ನಾರುವಂತೆ!

ಕಣ್ಣ ಬೆದರಿಸುತಿಹದು ತಿಮಿರಭಾರ
ಗುರಿಯ ಮಂದಿರ ದೂರ ; ನಾನಧೀರ -
ಬಾಳ ದುರ್ಗಮ ಪಥದ ಪಾದಯಾತ್ರಿ,
ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ!

                                                       - ಕೆ.ಎಸ್. ನಿಸಾರ್ ಅಹಮದ್
                                                            ' ಮನಸು ಗಾಂಧಿ ಬಜಾರು '

ನೆನೆದೆ ನೆನೆಯುವೆ

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

ಮನದಲ್ಲಿ ಘನಿಸಿರುವ ಚಹರೆ ಇಬ್ಬನಿಯಾಗಿ
ನಿನ್ನ ಹೂಗೆನ್ನೆಗೆಳು ತೋಯುವಾಗ ;
ಒದ್ದೆಗಣ್ಣಿನ ಜೊತೆಗೆ ಗದ್ಗದಿತ ಕೊರಲೊಂದು
ನಿನ್ನ ನಿದ್ದೆಗೆ ಉರುಲು ಬೀಸುವಾಗ.

ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ
ನನ್ನ ದೈನ್ಯವನೊಂದು ಹೋಲಿದಾಗ ;
ಕಣ್ಣಂಚ ಹೆದೆಯಲ್ಲಿ ಬಿಗಿಗೊಂಡ ನೋವೊಂದು
ನೇರ ನಿನ್ನೆದೆಯತ್ತ ತೂರಿದಾಗ.

ನಿನ್ನ ಬಗೆ ಮಸಣದಲಿ ಮುರಿದೊಲವ ಹೆಣವೊಂದು
ವಿರಸತೆಯ ಚಿತೆಯಲ್ಲಿ ಬೇಯುವಾಗ ;
ಮಣ್ಣಾದ ನೆನಹೊಂದು ಹಣ್ಣಾದ ಮೈಯೆಳೆದು
ಚಳಿಯ ಕಾಯಿಸಲಲ್ಲಿ ಹಾಯುವಾಗ.

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

                                                - ಕೆ.ಎಸ್. ನಿಸಾರ್ ಅಹಮದ್
                                                ' ನಿತ್ಯೋತ್ಸವ '
ಬೇಸರಾಗಿದೆ ಮಾತು

ಬೇಸರಾಗಿದೆ ಮಾತು, ಭಾರವಾಗಿದೆ ಮೌನ ;
ನೋವು ಕರಗಿದೆ ಕಣ್ಣಲಿ ;
ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ ;
ಮಳೆಗೆ ಆಸರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ,
ಜೀವ ರೆಕ್ಕೆಯ ಬಿಚ್ಚಿತೊ ;
ಯಾವ ಗವಿಗತ್ತಲಿನ ಮೌನಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ. 

                                                              - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '
ನೆನಪಾಗಿ ಬಾರದಿರು

ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ -
ಎಂದೊ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ -
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.

ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ ;
ಸಿಂಗರಿಸದಿರು ನನ್ನ ಚಿತೆಯ, ನಗೆಯನು ಹೊಯ್ದು
ನಾನೆ ಬೆಳೆಸಿದ ಹೂವ ಗೊಂಚಲಲ್ಲಿ.

ಯೌವನದ  ಹೊಸ್ತಿಲಲಿ ಕಟ್ಟಿದ್ದ ತೋರಣದ
ಕನಸ ತರಗೆಲೆಗಳನು ಬರಿದು ಮಾಡು ;
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕದಿರಲೆದೆ ತುಂಬ ಜೇನುಗೂಡು.

ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು :
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ ;
ಹೃದಯದೊಳನೋವುಗಳ ಬಿರಿಸುವರೆಮರೆಮಾತು -
ಮಾಯ್ದ ಗಾಯವ ಮತ್ತೆ ಗೀಚಬೇಡ!

ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೊ ಮುಗಿದಿರುವ ದೀಪಗಳನು ;
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು.

                                                                 - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '
ನಿನ್ನ ಹಿರಿಮೆ

ನಿನ್ನ ಅನುರಾಗವೇ ಬೆಳಗಿರುವುದೆನ್ನೆದೆಯ
ಇರುಳು ಬಾನಿನ ತುಂಬು ಬಿಂಬವಾಗಿ ;

ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೂ
ಸವಿನುಡಿಯ ನರುಗಂಪು ತೇಲಿರುವುದು ;

ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸುನಗೆಯ  ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ  ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು ;

ಯಾವ ಋಣವೊ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

                                                              - ಕೆ.ಎಸ್. ನಿಸಾರ್ ಅಹಮದ್
                                                                   ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php
ಮತ್ತದೇ ಬೇಸರ...


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ -
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ.

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು ,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ.

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ :
ಬರುವೆಯೋ, ಬಾರೆಯೋ ನೀನೆನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ, ಬಿಗಿಮೌನವ ಹೊಡೆದೋಡಿಸು ಬಾ!
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!

ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ.
ನೋಡಗೊ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ :
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.

                                                     - ಕೆ.ಎಸ್.ನಿಸಾರ್ ಅಹಮದ್
                                                       ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php
ಎಲ್ಲ ಮರೆತಿರುವಾಗ

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ :
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣಿನ ನೆಟ್ಟನೋಟದೆರಚಣವನ್ನೇ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ :
ಬಿರಿದ ತುಟಿಗಳ ತುಂಬುನಗೆಯ ಕಾರಣವನ್ನೆ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ.
                                           ಎಲ್ಲ ಮರೆತಿರುವಾಗ...

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ ;
ಭವ್ಯ ಭವಿತವ್ಯಕೆ ಮೊಗ ಮಾಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು ಓ! ಚೆನ್ನ ನೆನಪೇ.
                                          ಎಲ್ಲ ಮರೆತಿರುವಾಗ...

                                                                - ಕೆ.ಎಸ್. ನಿಸಾರ್ ಅಹಮದ್
                                                                 ' ನಿತ್ಯೋತ್ಸವ '
ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Legends-RatnamalaPrakash.php

ಶನಿವಾರ, ಅಕ್ಟೋಬರ್ 30, 2010

ಕವಿ ಬರೆದ

ಕವಿ ಬರೆದ:
ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೇ ಇರಿದಿರಿದು.
ಆಂತರ್ಯ ಸಂಚಯಿತ ಬಾಧೆಯನೆ ಸುರಿದೆರೆದು.
ಬಾಳ ಕುಲುಮೆಗೆ ಸಂದು
ಸದ್ದಿರದೆ ಕಡು ಬೆಂದು
ಬೂದಿಯೊಲುಮೆಗಳ -
ಲೋಕದನ್ಯಾಯಕ್ಕೆ,
ಜಾತಿಮತವರ್ಗಗಳ ನಿಷ್ಕರುಣ ತುಳಿತಕ್ಕೆ
ನುಚ್ಚಾದ ನಲುಮೆಗಳ -
ಹೊಸ ನೆತ್ತರುಕ್ಕಿಂದ ಮೇಲೇರಿ ಬರುವಲ್ಲೆ,
ದಾರಿಗಾಣದೆ ಸುಯ್ದು ನೆಲದಾಳದಲ್ಲೆ
ಹಿಂಜರಿದ ನೂರಾರು ಯೌವನದ ಚಿಲುಮೆಗಳ -
ಮಾಸ, ಮಾಸದವರೆಗು ಭಾರವನು ತಾ ಹೊತ್ತು
ಹಗಲಿರುಳು ಯಾತನೆಯನನುಭವಿಸಿ ಅತ್ತು
ಕವಿ ಹೆತ್ತ ಕವಿತೆಯನು - ಜೀವವನೆ ತೆತ್ತು. 

ತನ್ನ ಕೃತಿ ಕೀಳಲ್ಲ,
ಬಿತ್ತಿದುದು ಬೀಳಲ್ಲ,
ಕಾವ್ಯಕೂ ಮಿಗಿಲಿಲ್ಲ ಕಲೆಯೊಳಗೆ ಎಂದೆನೆಸಿ -
ತನ್ನ ಸೃಷ್ಟಿಯ ಪದರ ಪದರವನೆ ಅಲೆದರಸಿ
ತಳದಾಣಿಮುತ್ತುಗಳ ಎಳೆತರುವ ಭಾವುಕನ
ಬರವನ್ನೆ ತಾ ಕನಸಿ,
ಬರೆದ ಕವಿ
ಲೋಕಾನುಭವಿ.

                                                   - ಕೆ. ಎಸ್. ನಿಸಾರ್ ಅಹಮದ್