ಗಜಲ್ ೧೦
ಹೋಗುವಾಗ ಕಂಬನಿಗಳ ತುಳುಕಿಸದಿರು ಎನ್ನುವನು
ಕಳೆದ ಕ್ಷಣಗಳ ಸವಿಯ ಬಾಡಿಸದಿರು ಎನ್ನುವನು
ಎಂದಿದ್ದರೂ ಮಳೆ ಬೆಟ್ಟಗಳ ಸಂಬಂಧ ನಮ್ಮದು
ಇನಿತಾದರೂ ದೊರೆತದ್ದು ಮರೆಯದಿರು ಎನ್ನುವನು
ಖುಷಿಯೂ ಉದಾಸವೂ ಆಗುವುದು ಅವನು ಬಂದಾಗ
ಕಳೆವ ಕೆಲ ಗಳಿಗೆಯಲಿ ದುಗುಡಗೊಳ್ಳದಿರು ಎನ್ನುವನು
ಸಂಜೆ ಕರಗಿ ಹೋಗುವುದು ನೋಡುನೋಡುತ್ತಿರುವಂತೆ
ಕೆಲವು ತಾಸುಗಳ ಮಿಲನವ ದೂರದಿರು ಎನ್ನುವನು
ಅವ್ಯಕ್ತ ನೋವಿನಲಿ ಅಯ್ಯೊ ದೀಪವೂ ಸುಯ್ಯುತಿದೆ
ಗಲ್ಲ ತಟ್ಟುತ ಯಾಕೆ ಈ ನಿಟ್ಟುಸಿರು ಎನ್ನುವನು
ನೋವು ತರುವ ಇಂಥ ಪ್ರೀತಿ ಬೇಡವೇ ಬೇಡ
ಮುತ್ತಿಡುತ್ತ ಸಿಗದುದಕೆ ಮರುಗದಿರು ಎನ್ನುವನು
- ಎಚ್.ಎಸ್. ಮುಕ್ತಾಯಕ್ಕ




