ಮಂಗಳವಾರ, ಫೆಬ್ರವರಿ 21, 2012

ಕಾವ್ಯಕೆ ನಮನ

ಆ ಕನಸಿನ ಮೂರ್ತಿ
ನನಸಿನೊಳೂ ತಾನಾಯಿತು ಸ್ಫೂರ್ತಿ!

ಆ ಅಮೃತದ ಬಿಂದು
ಈ ಮೊಗ್ಗಿನ ಕಣ್ಗಳ ತೊಳೆದರಳಿಸಿತಿಂದು!

ಆ ಮಂದಾರದ ಗಂಧ
ಈ ಮರ್ತ್ಯದ ಹೂಗಿಳಿಯಿತು ತುಂಬಿ ಸುಗಂಧ!

ಆನಂದದ ಸಿಂಧು
ಬಂದಿಳಿದಾಯಿತು ಸೌಂದರ್ಯದ ಬಿಂದು!

ಮನ ಗೋಡೆಯ ಸುತ್ತು
ಒಡೆಯುತ ಹುಡಿಯಾಗುತ ಬಿತ್ತು!

ನಾ ಬಯಲಲಿ ನಿಂದೆ
ಹಿರಿಯರ ಎದೆಬಾಗಿಲ ಬಳಿ ಬಂದೆ

ನನ್ನವರಾದರು ಎಲ್ಲ
ಇದು ಬಲು ಅಚ್ಚರಿಗೊಳಿಸುವುದಲ್ಲ!

ಜಗದೊಲವಿನ ನಂಟತನ
ಲಭಿಸಿತು, ಅದಕಾಗಿಯೆ ಕಾವ್ಯಕೆ ನಮನ!

                                         - ಜಿ. ಎಸ್. ಶಿವರುದ್ರಪ್ಪ
                                            'ಚೆಲುವು-ಒಲವು'

ಕಾಮೆಂಟ್‌ಗಳಿಲ್ಲ: