ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷ ಬಂದಂತೆ ಯಾರು ಬಂದಾರು?

ಹೊಸವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು?

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೇ ಎಲ್ಲ!
ಹೊಸ ಬಯಕೆ, ಹೊಸ ಅಲೆ ರುಚಿರುಚಿಯ ಬೆಲ್ಲ!

ಏನಿದೆಯೋ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ,
ಕಪ್ಪಾದರೂ ಮುಗಿಲು ಜರಿ ಸೀರೆಯಣ್ಣ

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ

                                                         - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಹೊಸ ವರ್ಷದ ಹಾಡು

ಇಂದು ನಡುರಾತ್ರಿ
ಗಡಿಯಾರ ತನ್ನೆರಡು ಕೈಗಳ
ಜೋಡಿಸಿ ನಮಗೆs ನಿಮಗೆs
ವಂದನೆ ಸಲಿಸಿದ ಗಳಿಗೆ
ಅಭಿನಂದನೆ ತಿಳಿಸಿದ ಗಳಿಗೆ
ಬರಲಿದೆ ಹೊಸ ವರ್ಷ ಈ ಇಳೆಗೆ.
ಚಪ್ಪಾಳೆ ತಟ್ಟಿ, ಪಟಾಕಿ ಹಚ್ಚಿ,
ಆರತಿ ಬೆಳಗಿ, ಸ್ವಾಗತ ಮೊಳಗಿ,
ಹರಡಲಿ ದೆಸೆದೆಸೆಗೆ,
ಹರ್ಷದ ಈ ಒಸಗೆ
ಬರಲಿದೆ ಹೊಸ ವರ್ಷ ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ತುಂಬಿಸಿ ಗಾಜಿನ ಬಟ್ಟಲಿಗೆ
ವ್ಹಿಸ್ಕಿ, ರಮ್ಮು, ಬೀರು
ಅಥವಾ ಶಾವಿಗೆ ಖೀರು,
ಅಥವಾ ಮೆಣಸಿನ ಸಾರು,
ಅಥವಾ ನಿಮ್ಮ ಕಣ್ಣೀರು
ತಾಕಿಸಿ ಬಟ್ಟಲ ಬಟ್ಟಲಿಗೆ-Cheers!
ಸೋಕಿಸಿ ತುಟಿಗಳಿಗೆ,
ಅಂಜದೆ ಬೆಲೆಗಳಿಗೆ,
ಬರಲಿದೆ ಹೊಸ ವರ್ಷ ಈ ಇಳೆಗೆ
ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ಯಾರಿವನೀ ಭೂಪ?
ಏನಿವನ ಪ್ರತಾಪ?
ಕಾಲನs ಬೇತಾಳನs
ಎಲ್ಲ ಸಮಸ್ಯೆಗೂ ಉತ್ತರಿಸಬಲ್ಲ
ವಿಕ್ರಮನಿವನಲ್ಲ.
ವಾಮನs ಈ ವಾಮನs
ಮೂರೇ ಹೆಜ್ಜೆಗೆ ಮೂಜಗ ಅಳೆವ
ತ್ರಿವಿಕ್ರಮ ತಾನಲ್ಲ.
ಇಲ್ಲ ಇವನಲ್ಲಿ, ಪಾಪ!
ಅಲ್ಲಾದೀನನ ಮಾಯಾದೀಪ,
ನಮ್ಮಂತೆಯೇ ಹುಂಬ,
ಇವ ನಮ್ಮೆಲ್ಲರ ಪ್ರತಿಬಿಂಬ,
ಏನು ಮಾಡುವನೊ, ಏನು ನೀಡುವನೊ,
ಕಾದು ನೋಡೋಣ ಕೊಂಚ,
ಆತುರ ತರವಲ್ಲ,
ಛೇಡಿಸುವುದು ಸಲ್ಲ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

                               - ಬಿ. ಆರ್. ಲಕ್ಷ್ಮಣರಾವ್

ಸೋಮವಾರ, ಡಿಸೆಂಬರ್ 30, 2013

ಮದ್ದಲೆ ದನಿಗೆ ಎದ್ದು ಕುಣಿವ ಕವಿತೆಗಳು!



        'ಕಾಡು ಕುದರಿ ಓಡಿ ಬಂದಿತ್ತ' ಎಂಬ ಹಾಡನ್ನು ನಾನು ಕೇಳಿದ್ದೆನಾದರೂ ಅದೊಂದು ಜಾನಪದಗೀತೆ ಎಂದೇ ತಿಳಿದಿದ್ದೆ. ನಾಟಕಕಾರ, ಕಾದಂಬರಿಕಾರರಾಗಿ ನನಗೆ ಗೊತ್ತಿದ್ದ ಡಾ. ಚಂದ್ರಶೇಖರ ಕಂಬಾರರು ಕವಿಯೂ ಹೌದು ಎಂದು ನನಗೆ ತಿಳಿದದ್ದು ತಡವಾಗಿ! ಎಂಥ ಅದ್ಭುತ ಕವಿ!

         ಕಂಬಾರರ ಕಾವ್ಯಶೈಲಿಗೆ ಮನಸೋತು ನಾನೀಗಾಗಲೆ ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ. ಉತ್ತರ ಕನ್ನಡದ ದೇಸಿ ಕನ್ನಡ ಸೊಗಡಿನ ಅವರ ಕವಿತೆಗಳ ಪ್ರತಿ ಪದವೂ ಅತ್ಯಂತ ನಿರಾಯಾಸವಾಗಿ, ಸಹಜವಾಗಿ ಜೋಡಿಸಿದಂತಿವೆ. ಅವರ ಕೆಲವು ಕವಿತೆಗಳನ್ನು ಓದುವಾಗ ನನಗೆ, ಮದ್ದಲೆ ದನಿ ಕೇಳಿ ಅವು ಎದ್ದು ಕುಣಿಯುತ್ತಿವೆಯೇನೋ ಎಂಬ ಭಾವವುಂಟಾಯಿತು. ಅಂಥ ಲಯಬದ್ಧತೆ, ಹುಮ್ಮಸ್ಸು ಅವರ ಕವಿತೆಗಳಲ್ಲಿವೆ. ಅಲ್ಲಲ್ಲಿ ಗದ್ಯದ ರೀತಿ ಕಂಡರೂ, ಸತ್ವಶಾಲಿಯಾದ ವಸ್ತು ನಮ್ಮನ್ನು ಹಿಡಿದಿಡುತ್ತದೆ.

         ಅವರ 'ಕಾಡುಕುದುರೆ'ಯಂತೂ ಹುಚ್ಚೆದ್ದ ಕುದುರೆಯೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. 'ರೆಕ್ಕೆಯ ಹುಳು' ಭ್ರಮೆಯಿಂದ ವಾಸ್ತವಕ್ಕಿಳಿಸಿದರೆ, ಇನ್ನು ’ಆ ಮರ ಈ ಮರ’ವು ಪ್ರತಿ ಓದಿನಲ್ಲೂ ಹೊಸ ಒಳಾರ್ಥದಿಂದ ಸೋಜಿಗಗೊಳಿಸಿ ನನ್ನ ನೆಚ್ಚಿನ ಕವಿತೆಯಾಗಿಬಿಟ್ಟಿದೆ.

        ಇಷ್ಟೆಲ್ಲಾ ಹೇಳಿ, ಕುತೂಹಲ ಮೂಡಿಸಿ ನಿಮ್ಮನ್ನು ಸುಮ್ಮನೆ ಬಿಟ್ಟರಾದೀತೆ? :)
        ಇಗೊ, ಇಲ್ಲಿವೆ ಅವರ ಕೆಲವು ಕವಿತೆಗಳು, ನಿಮ್ಮ ಓದಿಗಾಗಿ.. ಓದಿ, ಪ್ರತಿಕ್ರಿಯಿಸಿ..

ಅಕ್ಕರೆಯಿಂದ,
ಕನಸು..
ಆ ಮರ ಈ ಮರ

ನದಿಯ ದಂಡೆಯಲ್ಲೊಂದು ಮರ
ನದಿಯಲ್ಲಿ ಒಂದು ಮರ.

ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ.

ಮ್ಯಾಲಿನ ಮರದಲ್ಲಿ ಚಿಲಿಪಿಲಿ ಪ್ರಪಂಚ
ಗೀತಂಗಳ ಕುಕಿಲುತಾ
ರೆಕ್ಕೆಯಂಚುಗಳಿಂದ ಎಲೆಗಳ ಮ್ಯಾಲೆ
ಕನಸುಗಳ ಗೀಚುತಾ ಇದ್ದರೆ -
ಕೆಳಗೆ ಬೇರುಗಳಲ್ಲಿ
ಚಿಳಿಮಿಳಿ ಮೀನು ಆಳಸುಳಿಯುತಾ
ನೆರಳುಬೆಳಕಿನ ಬಲೆಯಲೀಜುತಾ
ನೆನಪುಗಳ ಕೆರಳಿಸುತಾವೆ.

ತೆರೆ ಎದ್ದಾಗ 
ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ.

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ.

ನೀನೊಂದು ಮರ ಹತ್ತಿದರೆ
ಇನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ

ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ

ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅಂತ ತಿಳಿ.
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.

ಈ ಕಥೆಯ ದುರಂತ ದೋಷ ಯಾವುದೆಂದರೆ:
ನಿಜವಾದ ಮರ ಮತ್ತು
ನೀರಿನ ಮರ
ಇವೆರಡೂ ಒಂದಾದ ಸ್ಥಳ
ಮಾಯವಾಗಿರೋದು.

ಅದಕ್ಕೇ ಹೇಳುತ್ತೇನೆ ಗೆಳೆಯಾ -
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ,
ಮ್ಯಾಲಿಂದ ಜಿಗಿದು
ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕು.

                                         - ಡಾ. ಚಂದ್ರಶೇಖರ ಕಂಬಾರ
ನನ್ನ ಪಾತ್ರ

ನೋಡು ನೋಡುತ್ತಿದ್ದಂತೆ
ನನ್ನ ನಾಟಕದ ಆ ಪಾತ್ರ
ರಂಗದಿಂದಿಳಿದು ನೇರ ಬಳಿಗೇ ಬಂದ.
ಪಕ್ಕದ ಕುರ್ಚಿಯಲ್ಲಿ ಕೂತ.

ನಾನು ನಾಟಕ ನೋಡುತ್ತಿದ್ದರೆ
ಇವನು ನನ್ನ ಕಡೆ
ತನ್ನ ಕಣ್ಣು ಶಲಾಖೆಯೆಂಬಂತೆ
ಕಣ್ಣಿಂದ ನನ್ನೆದೆಯಲ್ಲಿ ತೂತು ಕೊರೆಯುತ್ತ ಕೂತ.

ತಗಲದ ಹಾಗೆ ಕಾಲು ಸರಿಸಿದರೆ ನಾನು
ಮುದ್ದಾಂ ಕಾಲು ತಗುಲಿಸಿ ಕೂತ.
ಭುಜ ಮುರಿಯುವಂತೆ ಕೈ ಹೇರಿದ.

ಎಲ್ಲರೂ ಸುಮ್ಮನಿದ್ದರೆ ಈತ ಖೊಕ್ಕೆಂದು ನಕ್ಕ.
ಅನಗತ್ಯ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿದ.
ಈಗ ಎಲ್ಲರ ಕಣ್ಣು ಇವನ ಮೇಲೆ.
ಇವನ ಕಣ್ಣು ನನ್ನ ಮೇಲೆ.

ಇದ್ಯಾಕೋ ಸರಿಹೋಗಲಿಲ್ಲಂತ
ನಾಟಕ ಬಿಟ್ಟು ಮನೆಗೆ ಹೊರಟೆ.
ಬೆನ್ನು ಹತ್ತಿ ಬಂದ.

ಬಾಗಿಲು ತೆರೆದರೆ
ನನಗಿಂತ ಮೊದಲೇ ಒಳಹೊಕ್ಕ.

ಥರಾವರಿ ದೇಶಾವರಿ ನಗೆ ನಗುತ್ತ
ಕನ್ನಡಿಯಾಗಿ ಎದುರಿಗೇ ನಿಂತ!

ಎಷ್ಟೊಂದು ಸೌಜನ್ಯ ಕಲಿಸಿ ಕಳಿಸಿದ
ನನ್ನ ಪಾತ್ರಗಳು
ಹಿಂಗ್ಯಾಕೆ ಮಾಡುತ್ತವೆ?

                                      - ಡಾ. ಚಂದ್ರಶೇಖರ ಕಂಬಾರ
ಇಟ್ಟಿಗೆಯ ಪಟ್ಟಣ

ಹಸಿರನ್ನಲ್ಲ,
ಈ ಸಿಟಿಯಲ್ಲಿ ಬಿತ್ತಿ ಬೆಳೆಯುತ್ತಾರೆ
ಮಣ್ಣಿನಿಟ್ಟಿಗೆಯನ್ನ.
ಇಟ್ಟಿಗೆ ಬೆಳೆಯುತ್ತದೆ,
ಕಟ್ಟಡವಾಗುತ್ತದೆ.
ಕಟ್ಟಡ ಆಕಾಶದವಕಾಶವನ್ನ
ಚುಚ್ಚಿ ಬಿಸಿ ಮಾಡುತ್ತದೆ.
ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ
ಕಿಸಕ್ಕಂತ ಹಲ್ಲು ಕಿರಿದು ಹಳದಿ ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ
ಹಸಿರು ಇಣುಕಿದರೆ
ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.
ಪಾಪಾತ್ಮ ಹಸಿರು ಹುತಾತ್ಮನಾಗದೆ
ಸಾಯುತ್ತದೆ.

ಗೊತ್ತೆ ನಿಮಗೆ? - ಈ ಸಿಟಿಯೊಳಗೆ
ಆತ್ಮದ ಮಾರ್ಕೆಟ್ಟಿದೆ.
ತಲೆಯ ಕೊಯ್ದು, ತೊಗಲ ಸುಲಿದು
ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ
ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ.
ತಲೆ ತಿಂಬವರಿಗೆ ಸೂಚನೆ:
ಅದು ಹಲ್ಕಿರಿದು ಅಣಕಿಸಿದರೆ
ಹೆದರಬೇಡಿರಿ.

                                  - ಡಾ. ಚಂದ್ರಶೇಖರ ಕಂಬಾರ
ತಕರಾರಿನವರು 

ತಕರಾರಿನವರು ಸ್ವಾಮೀ
ನಾವು ತಕರಾರಿನವರು

ಇಬ್ಬರ ತಕರಾರಿಗೆ ಹುಟ್ಟಿ
ಹಲವರ ತಕರಾರಿನಲ್ಲಿ
ಬೆಳೆದವರು.

ನಾವು ನಿಮ್ಮಂತೆ, ಹೋಗಲಿ
ಯಾರಂತಾದರೂ ಯಾಕಿಲ್ಲವೆಂದು
ಹಡೆದವರನಂದವರು.

ತಕರಾರನುಟ್ಟು ತಕರಾರ ತೊಟ್ಟು
ಮಸಡಿಗೆ ತೆರೆಗಣ್ಣು, ಕಿಸಬಾಯಿ
ಜೋಡಿಸಿ ನಕ್ಕು,
ಪುರಾಣದ ಹರಾಮತನದ
ಮನುವಿನ ಕಟ್ಟಡದ ಮೈಸಿರಿಗೆ
ಬೆದರಾಗಿ ನಿಂತು
ನಿಮ್ಮ ದೃಷ್ಟಿಗೂ
ತಕರಾರು ತೆಗೆದವರು
ಸ್ವಾಮೀ,
ನಾವು ತಕರಾರಿನವರು.

                                  - ಡಾ. ಚಂದ್ರಶೇಖರ ಕಂಬಾರ
ನೀನು-ನಾನು

ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆಗೆಟುಕದ ತೆರೆಯ ನೆರಳು ನೀನು;
ನಂಬಿರುವ ಬರಿ ತೋಳ ಹುಂಬ ನಾನು.
ಗೀಸಿ ಅಗಲಿಸಿದ ತುಟಿ, ಅದರೊಳಚ್ಚೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು;
ಬೆಳೆವಲದ ಉಸುಬಿನ ಮಸಾರಿ ನಾನು.
ಬ್ರಹ್ಮ ಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ
ಪಾಟಿಯಲಿ ಬರೆದ ಹುಸಿ ಚಿತ್ರ ನೀನು;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ?
ಓ ಅದರ ಜೀವಂತ ವ್ಯಾಖ್ಯೆ ನೀನು;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸದು,
ಮಾತಾಡಿ, ಮಟಾಮಾಯ-ಕನಸು ನೀನು;
ತುಟಿನೆಕ್ಕಿ ತುರುಸುತಿಹ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೊ, ಸರಿ ಇತ್ತೀಚೆ
ನಾನೂನು ಅರಿತೆ; ಮೃತ ಸ್ಮರಣೆ ನೀನು;
ಅದ ಹುಗಿದು ಕಟ್ಟಿರುವ ಗೋರಿ ನಾನು.

                                           - ಡಾ. ಚಂದ್ರಶೇಖರ ಕಂಬಾರ