ಮಂಗಳವಾರ, ನವೆಂಬರ್ 30, 2010

ಗೆಳೆತನ


ಕೊನೆಗಾಣದೆ ಬಿಗಿಮಾಣದೆ ತಳುವಬೇಕು - ಗೆಳೆತನ.
ತಳುವಬೇಕು - ನನಗೆ ನಿನಗೆ ಬರುವ ತನಕ ಕೊನೆದಿನ.
ತಳಿರ ತಳಿರ ತಳ್ಕೆಯಂತೆ ಮೃದುಲ ಮಧುರ ಜೀವನ.
ಮಲರ ಮಲರ ಮಾಳ್ಕೆಯಂತೆ ಮನದ ಮನದ ಮಿದುತನ.

ಒಂದೆ ಗಾನತಾನ ನನ್ನ ನಿನ್ನ ಹೃದಯ ಮಿಲನಕೆ.
ಒಂದೆ ಅಚ್ಚುಮೆಚ್ಚು ನಮ್ಮ ಭಾವ ಜೀವ ವಲನಕೆ.
ಒಂದೆ ಅಂಕೆಸಂಖ್ಯೆ ನಮ್ಮ ಸೌಖ್ಯದ ಸಂಕಲನಕೆ.
ಒಂದೆ ಗಮ್ಯಗತಿಯು ನಮ್ಮ ಜೀವನ ಸಂಚಲನಕೆ.

ಗುಡುಗು ಮಿಂಚಿನಂತೆ ಒಂದುಗೂಡಿ ಮೊಳಗಿ ಬೆಳಗುವಾ!
ಕಡಲುತಡಿಗಳಂತೆ ಒಂದನೊಂದು ತಡೆದು ತಡೆಹುವಾ
ಗಾಳಿ ಕಿಚ್ಚಿನಂತೆ ಕೂಡಿಯಾಡಿ ತಿರೆಯ ಬೆಳಗುವಾ!
ಬಾನುಬುವಿಗಳಂತೆ ಒಂದಕೊಂದು ಸೀಮೆ ಎನಿಸುವ!

ಮುಗಿಲ ಯುಗಲದಂತೆ ಬಂದು ಸೇರಿ ಸಾರಿ ಅಗಲದೆ,
ಹಗಲ ಮೊಗದ, ರಾಗದಂತೆ ಸಂಜೆಯೊಡನೆ ಜಗುಳದೆ
ಗಾಳಿಗೈಯ ತರಗಲಂತೆ ಕಲೆತು ತಿರುಗಿ ಕದಲದೆ
ಬಾಳಬೇಕು, ಬೆಳೆಯಬೇಕು ಸಖ್ಯ ಕ್ಷಣಿಕವೆನಿಸದೆ.

ನಿನ್ನೊಳೊಂದೆ ಭಿಕ್ಷೆ ಗೆಳತಿ, ಅದುವೆ ಹೃದಯದಾನವು!
ಜನ್ಮಮೃತ್ಯುಗಳಲು ನಗುವ ಪ್ರೇಮದಮೃತ ಪಾನವು.
ದುಃಖ ಸುಖಗಳನ್ನು ಮಿಗುವ ತ್ಯಾಗದ ಮರಗಾನವು
ಹೊಂದುವಳಿಕೆ ತವದ ಸೌಖ್ಯಯೋಗದ ಭ್ರಯಾನವು.

ನನ್ನ ನಿನ್ನ ಜೀವ, ಗೆಳತಿ, ಒಂದಕೊಂದು ಪೂರಕ,
ನನ್ನ ನಿನ್ನ ಭಾವ ಒಂದಕೊಂದು ಕಾಂತಿದಾಯಕ.
ಒಂದು ಹೃದಯ ಧನುವು, ಮೆಣದೊಂದು ನಿಶಿತ ಸಾಯಕ
ಒಂದು ಗಂಗೆ, ಒಂದು ಯಮುನೆ - ಏಕ ಮಾರ್ಗವಾಹಕ.

ಹೀಗೆ ಬಾಳ್ವೆನೆಂಬೆ ಬಯಕೆಯೊಂದದೇಕೆ ಹಿರಿದಿದೆ?
ಯೋಗವಿದು ನಿರರ್ಥ, ನಿನ್ನ ಹೃದಯ ಯೋಗ ಬರದಿರೆ.
ಬರಿಯ ಕೆಂಡ ಗಳಿಗೆಯೊಳಗೆ ನಂದಿ ಕಾಂತಿಯುಳಿಯದೆ?
ನೆರವು ಬರಲು ಗಾಳಿಯಿಂದ ಅದರ ಬಾಳು ಬೆಳಗದೆ?

                                                            - ಎಂ. ಗೋಪಾಲಕೃಷ್ಣ ಅಡಿಗ
                                                              ' ಕಟ್ಟುವೆವು ನಾವು '

ಶುಕ್ರವಾರ, ನವೆಂಬರ್ 26, 2010

ರೂಹಿಲ್ಲದ, ಕೇಡಿಲ್ಲದ

ಸಾವೇ ಓ ಸಾವೇ,
ನೀನು ರೂಹಿಲ್ಲದ ಕೇಡಿಲ್ಲದ
ಸಾವಿಲ್ಲದ ಚೆಲುವ ನನ್ನೊಲುಮೆ
ನಿನ್ನ ಮೇಲೆ ಹೆಚ್ಚಿದಷ್ಟೂ ನೀನು
ರಹಸ್ಯ. ಆದರೂ ರಹಸ್ಯವೇನಲ್ಲ
ಎಂಬ ಭ್ರಮೆಗಳ ಕೆದರಿ ಪ್ರಶ್ನೆಯೂ
ಗುತ್ತಿ, ಮುಖದಿರುವಿ ಹೋಗುವ
ಬದುಕಿಗೆ ಉತ್ತರವೂ ಕೂಡಾ
ನೀನಿರುವ ಜಗದಲಿ ಎಂಥ ಹೂ
ಹಣ್ಣು, ನಕ್ಷತ್ರ ಕನಸೊ ಎಂಬಂಥ
ಕುತೂಹಲ. ನಿನ್ನ ಹುಡುಕಿಕೊಂಡು
ನಾನೊಂದು ಬಾರಿ ರೈಲಿನಡಿ, ನೀರಿ
ನಾಳದಲಿ, ಗಣಿಯ ಎದೆಯೊಳು,
ಆಸ್ಪತ್ರೆಯ ಮೂಲೆಮೂಲೆಗಳಲಿ
ತುಂಬಿದ ಮನೆಗಳಲಿ, ನಗುವ
ಕಣ್ಣಿನಲಿ ಅಲೆದಾಡುತ್ತ ಸದ್ದಿಲ್ಲದೆ
ಅಡಗಿದ್ದೆ ನಿನ್ನನ್ನು ಕಂಡು
ಕೇಳಿದೆ; "ಸಾವೇ ನಿನಗೆ ಬಿಡು
ವಿರದ ಕೆಲಸ ಸರಿ ನನ್ನ ಮನೆಗೆಂದು
ಬರುವಿ? ನನ್ನ ಭಗ್ನ ಪ್ರೇಮಿಯಂತೆ
ನೋಡುವ ಈ ಬದುಕಿಗೆಂದು ವಿದಾಯ?"
ಸಾವು ನಗುನಗುತ್ತ ಉತ್ತರಿಸಿತು
"ಪ್ರಿಯೆ ನಿನ್ನಷ್ಟು ನನ್ನನ್ನು ಯಾರು 
ಪ್ರೀತಿಸುವರು? ಯಾರು ನೆನೆಯುವರು?
ಬೆಚ್ಚಗಿನ ಆ ಒಲವಿನಲಿ ನೆನೆಯಲಾಸೆ
ನನಗಿನ್ನೂ, ಆ ಪ್ರೀತಿ ಆ ಒಲವುಗಳ
ಸವಿ ಅನುಭವವಿರಲಿ ಇನ್ನೊಂದಿಷ್ಟು
ದಿನ, ನಿನ್ನ ಹೊರತು ನಾ ಇರಬಲ್ಲೆನೆ?
ಬದುಕಬಲ್ಲೆನೆ?" ನಗುನಗುತ್ತ
ಸಾವು ಹೊರಟು ಹೋಯಿತು - ನನಗೆ
ಬದುಕುವ ಹೊಸ ಉತ್ಸಾಹ ಹುಟ್ಟಿಸುತ್ತ!
ಹೌದು ನನಗೆ ಬದುಕುವ ಹೊಸ
ಉತ್ಸಾಹ ಹುಟ್ಟಿಸುತ್ತ.

                                      - ಎಚ್.ಎಸ್. ಮುಕ್ತಾಯಕ್ಕ

ಗಜಲ್

ಅವನು ಎದುರಿಗಿದ್ದರೂ ಅದೇಕೋ ನಾನು ನಂಬದೆ ಹೋದೆ.
ಜೀವನವು ಇಷ್ಟು ಕರುಣಾಳು ಎಂಬುದನು ನಚ್ಚದೆ ಹೋದೆ.

ಯಾರ ನೋವುಗಳನರಿಯುವುದು ಯಾರಿಗೂ ಬೇಕಾಗಿಲ್ಲ
ಎಲ್ಲರೂ ನನ್ನವರಲ್ಲವೆನ್ನುವುದನು ತಿಳಿಯದೆ ಹೋದೆ.

ಜನ್ಮಜನ್ಮಾಂತರದಿಂದಲೂ ಈ ಹೃದಯ ಒಬ್ಬಂಟಿಯೆ
ಯಾರು ಹೇಳಿದರೂ ಮುನ್ನವೀ ಸತ್ಯವ ಅರಿಯದೆ ಹೋದೆ.

ಇಂದು ಮಳೆಬಿಲ್ಲುಗಳ ಜಾತ್ರೆಯೇ ನೆರೆದಿದೆ ಇಳೆಯ ತುಂಬ
ಆ ಸೊಬಗನುಟ್ಟು ಬರುವಿಯೆಂಬ ಕಲ್ಪನೆಯು ಇರದೆ ಹೋದೆ.

ವಿಶ್ವಾಸವೆಂಬುದು ಬರಿ ಒಂದು ಸುಂದರ ಶಬ್ದ ಮಾತ್ರವು
ಆಣೆ ಭಾಷೆಯ ತಪ್ಪದವರನು ಎಲ್ಲೂ ಕಾಣದೆ ಹೋದೆ.

ಇಂಥ ಮಿಲನದಿರುಳು ವ್ಯರ್ಥ ಗತಿಸಿ ಹೋಗಿಹವು
ಈ ದಿನವೂ ಸಹ ಯಾಕೋ ಅವನ್ನೆಲ್ಲ ಮರೆಯದೆ ಹೋದೆ.

ನಿನ್ನ ದರ್ಶನದಿಂದ ಕತ್ತಲೆಯಲ್ಲೂ ಮನೆಯು ಬೆಳಗಿತು.
ನೋಡುತ್ತಲೇ ನಿಂತೆ ಒಳಗೆ ಬಾ ಎಂದು ಕರೆಯದೆ ಹೋದೆ.

                                                              - ಎಚ್ ಎಸ್. ಮುಕ್ತಾಯಕ್ಕ
ಗಜಲ್

ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.

ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು

ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.

ಇರುಳ ತಂಪಿನಲಿ ನೆನಪಾಯಿತು ಬಿಸಿಯಪುಗೆಯ ಒಡನಾಟ ತಪ್ಪಿದ್ದು
ಇನ್ನೊಂದು ಬಟ್ಟಲನು ತುಂಬುವರಾರೆಂದು ಮಧುಪಾತ್ರೆಯು ಕೇಳಿತು.

ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ 'ಮುಕ್ತಾ' ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.

                                                                - ಎಚ್.ಎಸ್. ಮುಕ್ತಾಯಕ್ಕ

ನಿನ್ನ ಸಂಗಾತಿ ಆಗಲಾರದ್ದಕ್ಕೆ

ಎಲ್ಲೆಡೆ ಚೈತ್ರ ಮುಂಗುರುಳ ಸರಿಸುತ್ತಾನೆ
ನನ್ನ ಮೊಗದಲ್ಲಿ ಮಾತ್ರ ಹಿಮಮಾರುತ!
ಮನೆಯ ತುಂಬೆಲ್ಲ ಎಂದೆಂದಿಗೂ ಪರಿಚಯ
ವಾಗಲೊಲ್ಲದ  ಅಪರಿಚಿತ ಮುಖಗಳು
ಭೂಕಂಪದಲಿ ಕುಸಿದ ಮನೆಯ ಅವಶೇ
ಷದಡಿ ಬದುಕಿರುವೆನೇನೋ ಎಂಬಂತೆ
ಗೆಳೆಯ ಮರುಗುತ್ತೇನೆ ನಿನ್ನವಳಾಗಲಾರದ್ದಕ್ಕೆ
ಹಕ್ಕಿಯಾಗಿ ಹಾರುತ್ತವೆ ನಿನ್ನ ಕವಿತೆಗಳು
ಬಾನ ತುಂಬೆಲ್ಲ ತೇಲುತ್ತವೆ - ನಾನು
ಮೋಡವಾಗಿದ್ದರೆ! ಹಂಬಲಿಸುತ್ತೇನೆ
ವಧುವಿನಂತೆ ಶೃಂಗಾರಗೊಂಡ ರಾತ್ರಿ
ಅವ್ಯಕ್ತ ಯಾತನೆಯ ಹೆಚ್ಚಿಸುತ್ತದೆ. ದಾರಿ
ತಪ್ಪಿದ ಯಾತ್ರಿಕನಂತೆ ಮನ ಬಂದಂತೆ
ಅಲೆದಾಡುತ್ತೇನೆ ನಿನ್ನ ಪಡೆಯಲಾರದ್ದಕ್ಕೆ.
ಈ ದುರಂತವನ್ನೇ ವೈಭವದಿಂದ ಬಾಳ
ಬೇಕಾದ ದೌರ್ಭಾಗ್ಯಕ್ಕೆ, ಆಕಾಶವೂ
ದುಃಖದಿಂದ ನೀಲಿಗಟ್ಟಿದೆ, ಬೆಳಗೂ ಕ್ಷಯ
ಗೊಂಡಿದೆ. ಸಾವು ಕೂಡಾ ದುಗುಡಗೊಂಡಿದೆ
ಇನಿಯ ಪರಿತಪಿಸುತ್ತೇನೆ ನಿನ್ನವಳಾಗದುದಕ್ಕೆ
ಮಳೆಗಾಲದಲ್ಲಿ ಹಳ್ಳಕೊಳ್ಳ ತುಂಬಿ ಹರಿಯುತ್ತವೆ
ಯಾವ ಎಲ್ಲೆ ಕಟ್ಟುಗಳಿಲ್ಲದೆಯೆ, ನಾನು ಸರಳು
ಗಳ ಹಿಂದೆ ಬಂದಿಯಾಗಿದ್ದೇನೆ. ನಾವಿಬ್ಬರೂ
ಎಂದಿಗೂ ಕೂಡೆವೆಂಬ ಬಿಕ್ಕಳಿಕೆ ಎದೆಯಲ್ಲಿ
ಪ್ರಿಯ, ಕಂಗೆಟ್ಟಿದ್ದೇನೆ ನಿನ್ನ ಪಡೆಯಲಾರದ್ದಕ್ಕೆ
ನಿನ್ನ ನೆನಪಿನಿಂದ ಮನೆಯನ್ನು ಶೃಂಗರಿಸುತ್ತೇನೆ
ನೀನಿರದ ನೋವನ್ನು ಕವಿತೆಗಳಲ್ಲಿ ತೋಡಿ
ಕೊಳ್ಳುವೆನು. ಬಲವಂತದ ನಗೆ ತುಟಿಯಂಚಿ
ನಲಿ, ಕಣ್ಣಿನಲಿ ಸಾವಿರ ನೋವಿನಲೆಗಳು
ನೀನಿಲ್ಲದೆ ಹಸಿರಿಲ್ಲ, ಉಸಿರಿಲ್ಲ ಒಳಗೇ
ಕೊರಗುತ್ತೇನೆ ಮುಖವಾಡಗಳ ಧರಿಸುತ್ತ,
ನನ್ನರಸ ಸಾವಬಯಸುತ್ತೇನೆ ಪ್ರತಿಕ್ಷಣ
ನಿನ್ನ ಸಂಗಾತಿ ಆಗಲಾರದ್ದಕ್ಕೆ.

                                              - ಎಚ್.ಎಸ್. ಮುಕ್ತಾಯಕ್ಕ

ನಮ್ಮ ಮುತ್ತಿನ ಹನಿಗಳು


ಎಂದು ನಾ ನಿನ್ನನು ಪಡಕೊಂಡೆನೋ
ಅಂದೇ ನಾ ನನ್ನ ಕಳಕೊಂಡೆನು
ಎಲ್ಲಿರುವೆ ನಾನೆಂದು ಹುಡುಕಿದಾಗ
ನಿನ್ನೊಳಗೆ ಬೆರೆತಿದ್ದ ನಾ ಕಂಡೆನು.

ಕತ್ತಲೆಯ ಆಳದಲ್ಲಿ ನಾ
ಕರಗಿ ಒಂದಾಗುತ್ತ
ನೂರಾರು ಕನಸುಗಳ
ಹೆಣೆ ಹೆಣೆಯುತ್ತಿರುವಂತೆ
ಅವು ಚೆಲ್ಲಾಪಿಲ್ಲಿ ಹರಡಿ
ನೋಡ ನೋಡುತ್ತಿದ್ದಂತೆ
ಪತಂಗಗಳಾಗಿ
ನನ್ನೆದುರೆ ಒಂದೊಂದಾಗಿ
ಸುಟ್ಟು ಬೀಳುವುವು.

ನಕ್ಷತ್ರಗಳಂತೆ
ಇಡೀ ರಾತ್ರಿ
ನಿದ್ದೆಗೆಟ್ಟು ಮಿನುಗುವ
ನನ್ನ ನಿನ್ನ ಕಣ್ಣುಗಳು
ಬೆಳಗು ಹರಿಯುತ್ತಿದ್ದಂತೆ
ರೆಪ್ಪೆ ಮುಚ್ಚುವುವು.

ನನ್ನ ಕಂಗಳು
ಕೆಂಡವಾಗಿ
ನಿನ್ನ ಸುಡುತ್ತಿರುವಾಗ
ಸುಡುವ ಬೆಂಕಿಯಲಿ
ನನಗೆ ಬೇಯುವ ಆಸೆ.

ಯುಗ ಯುಗಳಿಂದ
ಏಕಾಂಗಿಯಾಗಿ
ಬದುಕುತ್ತಿರುವ ಚಂದ್ರನ ಕಂಡು
ನನಗೆ
ಮರುಕ ಹುಟ್ಟುವುದು.

                                         - ಎಚ್.ಎಸ್. ಮುಕ್ತಾಯಕ್ಕ

ಗುರುವಾರ, ನವೆಂಬರ್ 25, 2010

ಹೇಗೆ ಬರಲಿ ಇನಿಯ ನಿನ್ನ ಬಳಿಗೆ?


ಧೋ ಎಂದು ಸುರಿಯುತಿದೆ ಭಾರಿ ಮಳೆ ಇಲ್ಲಿ,
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನುದನಿಯ.

ಇಂಗಿ ಹೋಯಿತು ಸಂಜೆ ಇರುಳ ಸೆರಗಲ್ಲಿ,
ಭಂಗ ಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?

ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೋ ನಿನ್ನ ಪ್ರೀತಿಯೊಳಗೆ!

                                                  - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
                                                     ' ಹಸಿರು ತುಂಬಿದ ಕಣಿವೆ '
ವೃದ್ಧಿ


ರಾತ್ರಿಯ ಹೊತ್ತು. ಮಳೆ ಬರುತಿತ್ತು.
ಒಮ್ಮೆಗೆ ಹೋದವು ದೀಪ.
ಕೊಡೆ ಹಿಡಿದದ್ದ ಮರದಡಿಯಲ್ಲಿ
ಯಾರೋ ಹುಡುಗಿಯು ಪಾಪ -

ನಿಂತಿದ್ದಾಳೆ ಸುರಿಯುವ ಸೋನೆ
ನಿಂತೀತೆಂದು ಬೇಗ
ಮಿಂಚಿತು ಮಿಂಚು. ಮರದಡಿ ಕಂಡನು :
ಒಬ್ಬ ಹುಡುಗ ಆವಾಗ!

ಝಲ್ಲೆಂದಿತು ಎದೆ. ಯಾರೋ ಸುಮ್ಮಗೆ
ಕಡ್ಡಿಯ ಗೀರಿದ ಹಾಗೆ
ಜುಂಜುಂ ಎನ್ನುವ ಏನೋ ಒಂದು
ಎದೆಯಲಿ ತಿರುಗಿದ ಹಾಗೆ.

"ರಾತ್ರಿಯ ಮಳೆ ಇದು ನಿಲ್ಲುವುದಿಲ್ಲ" -
ಎಂದನು ಪಕ್ಕದ ಹುಡುಗ.
ಏನು ಹೇಳುವುದೋ ತಿಳಿಯದೆ ಹುಡುಗಿ
ಸುಮ್ಮನೆ ನೋಡಿದಳಾಗ!

ಕತ್ತಲಿನಲ್ಲಿ ಎತ್ತರವಾಗಿ
ಕಪ್ಪಗೆ ನಿಂತಿದ್ದಾನೆ
ನಿಲ್ಲದ ಕಾರಿನ ಹಾಯುವ ಬೆಳಕು
'ಹುಡುಗನು ಹೇಗಿದ್ದಾನೆ?'

"ಎಲ್ಲಿ ನಿಮ್ಮ ಮನೆ? ಲೇಟಾದರೆ
ಆಟೋಗಳು ಸಿಗುವುದು ಕಷ್ಟ"
ಬಸವನಗುಡಿ ಎಂದಷ್ಟೆ ಹೇಳಿದಳು
ಹೆಣ್ಣೆ ಹಾಗೆ - ಅಸ್ಪಷ್ಟ.

ಒಬ್ಬಳೆ ಹುಡುಗಿ, ಚಾಲಕ ಹೇಗೋ!
ರಿಕ್ಷ ಹತ್ತುವುದು ಹೇಗೆ?
ಜೊತೆಗಿವನಿದ್ದರೆ ಎಷ್ಟೋ ಧೈರ್ಯ!
ಕುಳಿತಳು ರಿಕ್ಷಾದೊಳಗೆ.

ಸುರಿಯುವ ಮಳೆಯಲಿ ಓಡುವ ರಿಕ್ಷಾ
ಆಟೋದವನೂ ಹುಡುಗ!
ಹೀಗೇ ಕೇಳಿದ: "ಮಳೆಗೆ ಸಿಕ್ಕಿದಿರ
ಮದುವೆ ಮುಗಿಸಿ ಬರುವಾಗ?"

ಸುಮ್ಮನೆ ಇಳಿದರು ಹುಡುಗ ಹುಡುಗಿ
ಬಸವನ ಗುಡಿಯ ಬಳಿ
ಮತ್ತೆ ಸಿಕ್ಕೋಣ ಎಂದರು ನಿಲ್ಲದೆ
ಸುರಿಯುವ ಮಳೆಯಲ್ಲಿ.

ಹೀಗೆ ಒಂದಿರುಳು, ಒಂದು ಮಳೆ, ಆ
ಹಾದಿಯ ಒಂದು ಮರ
ಎರಡೆರಡಾದವು ಶಾಶ್ವತವಾಗಿ
ಅವರು ಅಗಲಿದಾಗ!

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                           ' ಮೂವತ್ತು ಮಳೆಗಾಲ '