ಗುರುವಾರ, ಜನವರಿ 19, 2012

ಪುಟ್ಟ ಕೊಳ

ನನ್ನವಳು, ಈ ನನ್ನಾಕೆ
ಹರಿಯುವ ನದಿಯಲ್ಲ,
ಸರಿವ ಸರಿತೆಯಲ್ಲ,
ಇವಳೊಂದು ಪುಟ್ಟಕೊಳ,
ನನ್ನ ಬಾಳಿನ ಜೀವ ಜಲ.

ಹರಿಯುವ ನದಿಯಲ್ಲ,
ಒಳಸುಳಿಗಳ ಭಯವಿಲ್ಲ,
ಕಾಣದ ಕಡಲಿನ ಕರೆಗೆ ಓಗೊಟ್ಟು
ತೊರೆದುಹೊಗುವಂಥ ತೊರೆಯಲ್ಲ,
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಹಗಲು ರವಿ, ಬೆಟ್ಟ, ಮುಗಿಲು,
ಚಿಕ್ಕೆ, ಚಂದಿರನ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು.
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಬಿರು ಬಿಸಿಲಿಗೆ ಈಜಾಡಲು,
ಹೂ ತೋಟಕೆ ನೀರೂಡಲು,
ಮಕ್ಕಳು ಮರಿ ಚಿಕ್ಕ ದೋಣಿಯಲಿ ಕೂತು
ನಕ್ಕು ನಲಿಯುತ ವಿಹಾರ ಮಾಡಲು
ಸದಾ ಸಮೃದ್ಧ ಜಲ,
ಇವಳೊಂದು ಪುಟ್ಟ ಕೊಳ.

ಕರುಳ ಬಳ್ಳಿ ಒಡಲಲ್ಲಿ,
ಬಡಿದ ಕಲ್ಲು ತಳದಲ್ಲಿ,
ನರುಗಂಪು ಸೂಸಿ ನಗುವ ತಾವರೆ
ನೀರ ಮೇಲ್ಪದರದಲ್ಲಿ.
ಗಹನ, ಕಾಣಲು ಸರಳ,
ಇವಳೊಂದು ಪುಟ್ಟ ಕೊಳ.

                                      - ಬಿ. ಆರ್. ಲಕ್ಷ್ಮಣರಾವ್
ಅಮ್ಮ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

                                        - ಬಿ. ಆರ್. ಲಕ್ಷ್ಮಣರಾವ್

ಸುಬ್ಬಾಭಟ್ಟರ ಮಗಳೇ

ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೆ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆ ಎಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು:
ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿಗೆ, ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಅವೂನು

ಪಾತರಗಿತ್ತಿಯ ಪಕ್ಕವನೇರಿ
ಹೂ-ಪಡಖಾನೆಗೆ ಹಾರಿ
ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ
ದಿನ ಹೊಸತನದಲಿ ಬೆಳಗಿ

                                              - ಬಿ. ಆರ್. ಲಕ್ಷ್ಮಣರಾವ್

ಬುಧವಾರ, ಜೂನ್ 8, 2011

ಬಾ ಬೇಗನೆ!

ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ;
ಎಲ್ಲಿ ಹೋದೆಯೊ, ಇನಿಯ? ಬಾ ಬೇಗನೆ.
ಮಬ್ಬು ಕವಿದಿದೆ ಮನಕೆ; ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ: ಬಾ ಬೇಗನೆ!

ಮುಳುಗಿದುದು ರವಿ; ಓಕುಳಿಯ ಚೆಲ್ಲಿದುದು ಸಂಧ್ಯೆ;
ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ.
ಕತ್ತಲೆಯ ಕರಿನೆಳಲೊಡನೆ ಮೂಡಿದುವು ತಾರೆ;
ಹಬ್ಬಿಹುದು ಮರುಭೂಮಿಯಂತೆ ಶಾಂತಿ!

ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ
ಹಾದಿ ನೋಡುತಲಿಹೆನು, ಬಾ ಬೇಗನೆ.
ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು
ಮುದಗೊಳಿಸು, ಹೃದಯೇಶ, ಬಾ ಬೇಗನೆ.

                            - ಕುವೆಂಪು
                            ' ಪ್ರೇಮ ಕಾಶ್ಮೀರ '

ತೆರೆದಿದೆ ಮನೆ, ಓ, ಬಾ ಅತಿಥಿ !

ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ,
ಓ ನವಜೀವನ ಅತಿಥಿ!

ಆವ ರೂಪದಲಿ ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು  ಬಹೆಯ?
ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರು ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,
             ಬಾನಾಗಿ,
                             ಗಿರಿಯಾಗಿ,
                                     ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ  
ಬಾ, ಅತಿಥಿ!
ತೆರೆದಿದೆ ಮನೆ, ಓ  ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!

                                    - ಕುವೆಂಪು
                                        ' ಪ್ರೇಮ ಕಾಶ್ಮೀರ '

ಬುಧವಾರ, ಮೇ 11, 2011

ವೀಣಾಗಾನ

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
 ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

                    - ಕುವೆಂಪು
                     ' ಪ್ರೇಮ ಕಾಶ್ಮೀರ '
ನೀನೆನ್ನ ಬಳಿಯಿರಲು

ನೀನೆನ್ನ ಬಳಿಯಿರಲು ಜಗ ತುಂಬಿ ತುಳುಕುವುದು;
ನೀನು ಹೋದರೆ ದೂರ ಶೂನ್ಯವಾಗುವುದು.
ನೀನೆನ್ನ ಜೀವನದ ಸರ್ವಸ್ವವಾಗಿರುವೆ;
ಓ ನನ್ನ ಪ್ರಿಯ ಮೂರ್ತಿ, ಎದೆಗೆ ಬಾರೈ.

ಬಿಸಿಲುರಿವ ಮರುಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗಕೆಳಸುವುದು;
ಮಳೆಗರೆದು, ತಂಪಿತ್ತು, ಪರಿಹರಿಸಿ ಬೇಗೆಯನು,
ಪ್ರೇಮತೋಯದ ಮೂರ್ತಿ, ಎದೆಗೆ ಬಾರೈ.

ಅಗಲಿಕೆಯ ಸಹಿಸಲಾರೆನು ನಾನು; ನಿನ್ನನ್ನೆ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು.
ಓ ನನ್ನ ಆನಂದ ಸತ್ಯಸುಂದರ ಮೂರ್ತಿ,
ಶೂನ್ಯವನು ಪೂರ್ಣಗೈ! ಎದೆಗೆ ಬಾರೈ!

                                      - ಕುವೆಂಪು
                                    ' ಪ್ರೇಮ ಕಾಶ್ಮೀರ '
ಹೂವಿನ ಕೋರಿಕೆ

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರ ಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನೆ ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ, ಓ ನನ್ನ ಭ್ರಮರ ಬಂಧು!

                                    - ಕುವೆಂಪು
                                   ' ಪ್ರೇಮ ಕಾಶ್ಮೀರ '